ಶ್ರೀ ಯಾಗಂಟಿ ಉಮಾ ಮಹೇಶ್ವರ ದೇವಸ್ಥಾನ ಅಥವಾ ಯಾಗಂಟಿಯು ಪ್ರಸಿದ್ಧ ಶೈವ ಕ್ಷೇತ್ರವಾಗಿದೆ. ಯಾಗಂಟಿಯು ಭಾರತದ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ಕಾಲಜ್ಞಾನಿ ಶ್ರೀ ಶ್ರೀ ಬ್ರಹ್ಮನವರು ವಾಸಿಸುತ್ತಿದ್ದ ಬನಗಾನಪಲ್ಲಿ ಪಟ್ಟಣದ ಸಮೀಪದಲ್ಲಿರುವ ಒಂದು ಪುಣ್ಯಕ್ಷೇತ್ರವಾಗಿದೆ. ಈ ದೇವಾಲಯವನ್ನು ವೈಷ್ಣವ ಶೈಲಿಯಲ್ಲಿ ನಿರ್ಮಿಸಲಾಗಿದೆ. ಯಗಂಟಿ ತನ್ನ ಆಹ್ಲಾದಕರ ಪ್ರಕೃತಿ ಸೌಂದರ್ಯದಿಂದ ಮನಸೆಳೆಯುವ ಪುಣ್ಯಕ್ಷೇತ್ರಗಳಲ್ಲಿ ಒಂದು. ಇಲ್ಲಿ ಸ್ಥಾಪಿಸಲಾದ ನಂದಿ ಪ್ರತಿಮೆಯು ಪ್ರತಿ 20 ವರ್ಷಗಳಿಗೊಮ್ಮೆ ಒಂದು ಇಂಚುಗಳಷ್ಟು ಬೆಳೆಯುತ್ತಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ದೃಢಪಡಿಸಿದೆ. ಯಾಗಂಟಿ ಉಮಾಮಹೇಶ್ವರ ಸ್ವಾಮಿ ದೇವಸ್ಥಾನವು ಬನಗಾನಪಲ್ಲಿ ಪಟ್ಟಣದಿಂದ 14 ಕಿ.ಮೀ ದೂರದಲ್ಲಿ ಪಾತಪಾಡು ಗ್ರಾಮದ ಸಮೀಪದಲ್ಲಿದೆ. ಇಲ್ಲಿರುವ ಅಗಸ್ತ್ಯ ಮಹರ್ಷಿ ತಪಸ್ಸು ಮಾಡಿದ ಗುಹೆ ಮತ್ತು ವೀರಬ್ರಹ್ಮೇಂದ್ರಸ್ವಾಮಿ ತಪಸ್ಸು ಮಾಡಿದ ಗುಹೆಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಮತ್ತು ಪೌರಾಣಿಕ ದಂತಕಥೆಗಳನ್ನು ಹೇಳಲಾಗುತ್ತದೆ. ಯಾಗಂಟಿ ದೇವಸ್ಥಾನದಲ್ಲಿರುವ ನಂದಿ ವಿಗ್ರಹದ ಹೆಸರು "ಯಾಗಂಟಿ ಬಸವಣ್ಣ". "ಕಲಿಯುಗದ ಅಂತ್ಯದ ವೇಳೆಗೆ ಯಾಗಂಟಿ ಬಸವಣ್ಣನವರು ಉದಯಿಸಿ ಸ್ಥಾನ ಪಡೆಯುತ್ತಾರೆ ಎಂದು ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿಗಳು ಭವಿಷ್ಯವಾಣಿಯಲ್ಲಿ ವಿವರಿಸಿದ್ದಾರೆ". ಶ್ರೀ ಅಗಸ್ತ್ಯ ಮಹರ್ಷಿಗಳ ಶಾಪದಿಂದ ಈ ಗ್ರಾಮದಲ್ಲಿ ಕಾಗೆಗಳು ಇಲ್ಲವೆಂಬ ಪ್ರತೀತಿ ಇದೆ. == ದೇವಾಲಯದ ಇತಿಹಾಸ == ಯಾಗಂಟಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ದೊರೆಗಳಾದ ಸಂಗಮ ರಾಜವಂಶದ ಹರಿಹರ ಬುಕ್ಕ ರಾಯರು 15 ನೇ ಶತಮಾನದಲ್ಲಿ ನಿರ್ಮಿಸಿದರು. ಸ್ಥಳದ ಐತಿಹ್ಯ: ದೇವಾಲಯದ ಆವರಣದಲ್ಲಿರುವ ಗುಹೆಯಲ್ಲಿ ತಪಸ್ಸು ಮಾಡಿದ ಶ್ರೀ ಅಗಸ್ತ್ಯ ಮಹಾ ಮುನೀಶ್ವರರು ಇಲ್ಲಿನ ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಗೆ ದೇವಾಲಯ ನಿರ್ಮಿಸಲು ನಿರ್ಧರಿಸಿದರು. ಆದರೆ ಅವರು ಪ್ರತಿಷ್ಠಾಪಿಸಲು ಬಯಸಿದ ವಿಗ್ರಹದ ಕಾಲ್ಬೆರಳ ಉಗುರು ಮುರಿದಿದ್ದರಿಂದ ಪ್ರತಿಷ್ಠಾಪಿಸಲಿಲ್ಲ. ಹತಾಶರಾದ ಋಷಿಗಳು ಶಿವನನ್ನು ಕುರಿತು ತಪಸ್ಸು ಮಾಡಿದರು. ಭಗವಾನ್ ಪರಮೇಶ್ವರನು ಪ್ರತ್ಯಕ್ಷನಾಗಿ, ಆ ಸ್ಥಳವು ಕೈಲಾಸವನ್ನು ಹೋಲುವುದರಿಂದ ಅಲ್ಲಿ ಶಿವನನ್ನು ಪ್ರತಿಷ್ಠಾಪಿಸಲು ಹೇಳುತ್ತಾನೆ. ಆಗ ಅಗಸ್ತ್ಯರು ಶಿವನನ್ನು ಅದೇ ಬಂಡೆಯ ಮೇಲೆ ಪಾರ್ವತೀಸಮೇತನಾಗಿ ಉಮಾಮಹೇಶ್ವರನಾಗಿ ಭಕ್ತರಿಗೆ ದರಶನ ನೀಡುವಂತೆ ಕೇಳುತ್ತಾರೆ. ಎರಡನೇ ಕಥೆ: ಚಿಟ್ಟೆಪ್ಪ ಎಂಬ ಶಿವಭಕ್ತನು ಶಿವನನ್ನು ಕುರಿತು ತಪಸ್ಸು ಮಾಡಿದನು. ಶಿವನು ಅವನಿಗೆ ಹುಲಿಯಂತೆ ಕಾಣುತ್ತಾನೆ. ಆಗ ದೇವರು ಹುಲಿಯ ರೂಪದಲ್ಲಿ ಪ್ರತ್ಯಕ್ಷನಾದನೆಂದು ಅರಿತ ಚಿಟ್ಟೆಪ್ಪನು “ನೇಗಂಟಿ ಶಿವನು ನೇ ಕಂಟಿ” ಎಂದು ಸಂತಸದಿಂದ ಕುಣಿದಾಡಿದನು. ದೇವಾಲಯದ ಸಮೀಪದಲ್ಲಿ ಚಿಟ್ಟೆಪ್ಪ ಗುಹೆ ಇದೆ. ಇದು ದೇಶದ ಅತಿಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಯಾಗಂಟಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಭಾರತದ ಮಹಾನ್ ರಾಜವಂಶಗಳು ವಹಿಸಿಕೊಂಡಿದ್ದವು. ಯಾಗಂಟಿ ಕ್ಷೇತ್ರದ ಮುಖ್ಯ ದೇವಾಲಯದಲ್ಲಿ ಶ್ರೀ ಉಮಾಮಹೇಶ್ವರ ಲಿಂಗ ಇದೆ. ಈ ದೇವಾಲಯದಲ್ಲಿ ಶಿವ, ಪಾರ್ವತಿ ಮತ್ತು ನಂದಿ ದೇವತೆಗಳ ವಿಗ್ರಹಗಳೂ ಇವೆ. ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಶಿವನನ್ನು ಭಕ್ತರು ಪೂಜಿಸುತ್ತಾರೆ. === ಪುಷ್ಕರಣಿ === ಇಲ್ಲಿಯ ನಂದೀಶ್ವರನ ವಿಗ್ರಹವು ಪ್ರಮುಖವಾಗಿದೆ. ಮುಂದೆ ದೇವಸ್ಥಾನದ ಪ್ರಾಂಗಣದಲ್ಲಿ ಚಿಕ್ಕ ತೊರೆ ಇದೆ. ನಿಸರ್ಗದ ಮಡಿಲಲ್ಲಿ ಹುಟ್ಟುವ ಮಲೆನಾಡಿನ ತೊರೆಯ ಇಳಿಜಾರಿನಲ್ಲಿ ವರ್ಷಪೂರ್ತಿ ಹರಿಯುವ ಪುಟ್ಟ ನಂದಿ ವಿಗ್ರಹದ ಬಾಯಿಯಿಂದ ದೇವಸ್ಥಾನದ ಆವರಣದ ಮೂಲೆಯವರೆಗೂ ತಲುಪುತ್ತದೆ. ಮೂಲೆಯಲ್ಲಿರುವ ನೀರು ಯಾವುದೇ ಸಮಯದಲ್ಲಿ ಒಂದೇ ಮಟ್ಟದಲ್ಲಿರುವುದು ಗಮನಾರ್ಹವಾಗಿದೆ. ಈ ಮೂಲೆಯಲ್ಲಿರುವ ನೀರು ಕೊಳವನ್ನು ತಲುಪುತ್ತದೆ. ಇದರ ನೀರು ಔಷಧೀಯ ಗುಣಗಳನ್ನು ಹೊಂದಿದ್ದು, ಇದರಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಆಗಸ್ತ್ಯ ಮುನಿಗಳು ಈ ಕೊಳದಲ್ಲಿ ಸ್ನಾನ ಮಾಡಿದ ನಂತರ ಶಿವನನ್ನು ಪೂಜಿಸುತ್ತಿದ್ದರು. . ದೇವಾಲಯದ ಮುಖ್ಯ ಗೋಪುರವು ಐದು ಅಂತಸ್ತುಗಳನ್ನು ಹೊಂದಿದೆ. ಇದರಾಚೆಗೆ ರಂಗಮಂಟಪ, ಮುಖ ಮಂಟಪ, ಅಂತರಾಳವಿದೆ. ಗರ್ಭಗುಡಿಯಲ್ಲಿ ಲಿಂಗ ರೂಪದ ದೇವರ ಮೇಲೆ ಉಮಾ ಮಹೇಶ್ವರನ ರೂಪಗಳೂ ಚಿತ್ರಿಸಲ್ಪಟ್ಟಿವೆ. == ನೈಸರ್ಗಿಕ ಗುಹೆಗಳು == ಯಾಗಂಟಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳು ನಮ್ಮಲ್ಲಿ ಬೆರಗು ಹುಟ್ಟಿಸುತ್ತವೆ. ದೇವಾಲಯದ ಉತ್ತರಕ್ಕೆ ಶ್ರೀ ಅಗಸ್ತ್ಯ ಮಹಾಮುನಿಯ ಗುಹೆ, ದೇವಾಲಯದ ಪ್ರವೇಶದ್ವಾರದ ಉತ್ತರಕ್ಕೆ ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಯ ಗುಹೆ ಮತ್ತು ಪುಷ್ಕರಿಣಿಯ ಉತ್ತರಕ್ಕೆ ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಯ ಗುಹೆಗಳಿವೆ. === ಶ್ರೀ ಅಗಸ್ತ್ಯ ಮಹಾಮುನಿಯ ಗುಹೆ === ಶ್ರೀ ಅಗಸ್ತ್ಯ ಮಹಾಮುನಿಯು ಈ ಗುಹೆಯಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದರು ಎಂದು ಹೇಳಲಾಗುತ್ತದೆ. ಈ ಗುಹೆಯನ್ನು ಪ್ರವೇಶಿಸಲು 120 ಕಡಿದಾದ ಮೆಟ್ಟಿಲುಗಳಿವೆ. ಈ ಗುಹೆಯಲ್ಲಿ ಪಶ್ಚಿಮ ಭಾಗದಲ್ಲಿ ನೈಸರ್ಗಿಕವಾಗಿ ರೂಪುತಳೆದ ಶಿವಲಿಂಗ ಮತ್ತು ಆದಿಶೇಷನ ಆಕಾರಗಳನ್ನು ಕಾಣಬಹುದು. ಇಲ್ಲಿಂದ ಇತರ ಗುಹೆಗಳಿಗೆ ಮತ್ತು ವಿವಿಧ ಪುಣ್ಯಕ್ಷೇತ್ರಗಳಲ್ಲಿರುವ ದೇಗುಲಗಳಿಗೆ ಸುರಂಗಗಳಿವೆ ಎಂದು ಹೇಳುತ್ತಾರೆ. === ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಯ ಗುಹೆ === ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಕೆತ್ತಿಸುವಾಗ ಕಾಲ್ಬೆರಳ ಉಗುರು ಮುರಿದಿದೆ. ಪೂಜೆಯನ್ನು ಮಾಡಲು ಈ ರೀತಿಯ ಅಪೂರ್ಣ ವಿಗ್ರಹವನ್ನು ಖರೀದಿಸಬಾರದು. ಆದುದರಿಂದ ಈ ವಿಗ್ರಹವನ್ನು ಶ್ರೀ ಅಗಸ್ತ್ಯ ಮಹರ್ಷಿಯವರು ಈ ಗುಹೆಯಲ್ಲಿ ಪ್ರತಿಷ್ಠಾಪಿಸಿದರು. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲ ನಿರ್ಮಾಣಕ್ಕೂ ಮುನ್ನ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಸ್ಥಳವು ತಿರುಪತಿಗೆ ಪರ್ಯಾಯವಾಗಲಿದೆ ಎಂದು ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು ತಮ್ಮ ಕಾಲಾನುಕ್ರಮದಲ್ಲಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ. ಗುಹೆಯ ಮೆಟ್ಟಿಲುಗಳು ಗುಹೆಯೊಳಗೆ ಹೋಗಲು ಸಹಕಾರಿಯಾಗಿವೆ. === ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳ ಗುಹೆ === ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು ಈ ಗುಹೆಯಲ್ಲಿ ಕಾಲಜ್ಞಾನವನ್ನು ಬರೆದಿದ್ದಾರೆ ಎಂದು ಭಕ್ತರು ನಂಬುತ್ತಾರೆ. ಇದನ್ನು ಶಂಕರ ಗುಹ ಅಥವಾ ರೋಕಲ್ಲ ಗುಹ ಎಂದೂ ಕರೆಯುತ್ತಾರೆ. ನೀವು ಈ ಗುಹೆಯೊಳಗೆ ಬಾಗಿ ಹೋಗಬೇಗಾಗುತ್ತದೆ. ಈ ಗುಹೆಯಿಂದ ಬನಗಾನಪಲ್ಲಿ ಪಟ್ಟಣದ ಸಮೀಪದಲ್ಲಿರುವ ರವ್ವಲ ಬೆಟ್ಟದ ಗುಹೆಗಳಿಗೆ ಸಾಗುವ ದಾರಿಯಿದೆಯೆಂದು ಹೇಳಲಾಗುತ್ತದೆ. ಆದರೆ ಸದ್ಯ ಆ ರಸ್ತೆಯನ್ನು ಮುಚ್ಚಲಾಗಿದೆ. === ಯಾಗಂಟಿ ಬಸವಣ್ಣ === ದೇವಾಲಯದ ಎದುರಿನ ಮುಖಮಂಟಪದಲ್ಲಿ ಬಸವಣ್ಣನ ಪ್ರತಿಮೆ ಇದ್ದು, ಅದು ಸ್ವಯಂಭೂ ಎಂದು ಹೇಳಲಾಗುತ್ತದೆ. ಈ ವಿಗ್ರಹವು ಜೀವಕಳೆಯಿಂದ ತುಂಬಿದೆ. ಈ ಬಸವಣ್ಣನ ವಿಗ್ರಹವು ಅಗಾಧವಾಗಿ ಬೆಳೆಯುತ್ತಿದೆ (ವರ್ಷಕ್ಕೆ ಒಂದು ಇಂಚು) ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಮೀಕ್ಷೆ ದೃಢಪಡಿಸಿರುವುದು ಅದ್ಭುತ ವಿಷಯವಾಗಿದೆ. ಯಾಗಂಟಿ ಬಸವಣ್ಣನವರು ಕಲಿಯುಗಾಂತದಲ್ಲಿ ಉತ್ತುಂಗಕ್ಕೇರುತ್ತಾರೆ ಎಂದು ಶ್ರೀ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿಗಳ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಲಾಗಿದೆ. === ಕಾಗೆಗಳಿಗೆ ಶಾಪ === ಯಾಗಂಟಿಯಲ್ಲಿ ಕಾಗೆಗಳಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ಒಂದು ಕಥೆ ಪ್ರಚಾರದಲ್ಲಿದೆ. ಈ ಹಿಂದೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಗಸ್ತ್ಯ ಮುನಿ ಇಲ್ಲಿ ವೆಂಕಟೇಶ್ವರಸ್ವಾಮಿಯ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದ್ದರು. ಪ್ರತಿಮೆ ಮಾಡುವಾಗ ಕಾಲ್ಬೆರಳ ಉಗುರು ಮುರಿದಾಗ. ತನ್ನ ಇಚ್ಛೆಯು ದೋಷಪೂರಿತವಾಗಿದೆಯೇ ಎಂದು ಅವನು ಅನುಮಾನಿಸಿದಾಗ, ಅವನು ಶಿವನನ್ನು ಧ್ಯಾನಿಸಿದನು. ಆ ಸಮಯದಲ್ಲಿ ಕಾಗೆಗಳು ಅವನ ತಪಸ್ಸಿಗೆ ಅಡ್ಡಿಪಡಿಸಿದವು, ಹಾಗಾಗಿ ಅವರು ಆ ಪ್ರದೇಶದಲ್ಲಿ ಕಾಗೆಗಳು ತಿರುಗಾಡುವುದನ್ನು ನಿಷೇಧಿಸಿ ಶಾಪ ನೀಡುತ್ತಾರೆ. ಹಾಗಾಗಿಯೇ ಇಲ್ಲಿ ಕಾಗೆಗಳು ಕಾಣಿಸುವುದಿಲ್ಲ ಎನ್ನುತ್ತಾರೆ. == ಯಾಗಂಟಿ ಕ್ಷೇತ್ರಕ್ಕೆ ಹೋಗುವ ದಾರಿ == ಈ ಕ್ಷೇತ್ರವನ್ನು ರಸ್ತೆಯ ಮೂಲಕ ಮಾತ್ರ ತಲುಪಬಹುದು. ಯಾಗಂಟಿ ಕ್ಷೇತ್ರವು ಈ ಪ್ರದೇಶದ ಕೇಂದ್ರವಾದ ಬನಗಾನಪಲ್ಲಿ ಪಟ್ಟಣದಿಂದ ಪಶ್ಚಿಮಕ್ಕೆ ಸುಮಾರು 14 ಕಿಮೀ ದೂರದಲ್ಲಿ ಬನಗಾನಪಲ್ಲೆ ಪ್ಯಾಪಿಲಿಗೆ ಹೋಗುವ ಮಾರ್ಗದಲ್ಲಿದೆ. ಇದು ಆಂಧ್ರಪ್ರದೇಶ ರಾಜ್ಯದ ಜಿಲ್ಲಾ ಕೇಂದ್ರವಾದ ಕರ್ನೂಲ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಕರ್ನೂಲ್, ಬನಗಾನಪಲ್ಲಿ ಮತ್ತು ನಂದ್ಯಾಳದಿಂದ ಯಾಗಂಟಿ ಕ್ಷೇತ್ರಕ್ಕೆ ಬಸ್ಸುಗಳ ಸೌಲಭ್ಯವಿದೆ. ಐತಿಹಾಸಿಕ ತಾಣವಾದ ಬೆಲಂ ಗುಹೆಗಳು ಇಲ್ಲಿಂದ ಸುಮಾರು 45 ಕಿಮೀ (1.5 ಗಂಟೆಗಳು) ದೂರದಲ್ಲಿವೆ == ಚಿತ್ರಮಾಲಿಕೆ == == ಉಲ್ಲೇಖ ==